“ಪರದೂಷಣೆ ಏನೆಂದು ನಿಮಗೆ ತಿಳಿದಿದೆಯೇ?” ಅನುಯಾಯಿಗಳು ಉತ್ತರಿಸಿದರು: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “(ಪರದೂಷಣೆ ಎಂದರೆ) ನಿನ್ನ ಸಹೋದರನ ಬಗ್ಗೆ ಅವನಿಗೆ ಇಷ್ಟವಿಲ್ಲದ ಮಾತನ್ನು ಹೇಳುವುದು...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಪರದೂಷಣೆ ಏನೆಂದು ನಿಮಗೆ ತಿಳಿದಿದೆಯೇ?” ಅನುಯಾಯಿಗಳು ಉತ್ತರಿಸಿದರು: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “(ಪರದೂಷಣೆ ಎಂದರೆ) ನಿನ್ನ ಸಹೋದರನ ಬಗ್ಗೆ ಅವನಿಗೆ ಇಷ್ಟವಿಲ್ಲದ ಮಾತನ್ನು ಹೇಳುವುದು.” ಆಗ ಒಬ್ಬರು ಕೇಳಿದರು: “ಒಂದು ವೇಳೆ ನಾನು ಹೇಳುವ ಸಂಗತಿ ಅವನಲ್ಲಿದ್ದರೆ?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: “ಅದು ಅವನಲ್ಲಿದ್ದರೆ ನೀನು ಅವನ ಬಗ್ಗೆ ಪರದೂಷಣೆ ಮಾಡಿರುವೆ. ಅದು ಅವನಲ್ಲಿಲ್ಲದಿದ್ದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿರುವೆ.”
Sahih/Authentic. - Muslim

ವಿವರಣೆ

ನಿಷೇಧಿಸಲಾದ ಪರದೂಷಣೆ ಯಾವುದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ಅದು ಅನುಪಸ್ಥಿತನಾಗಿರುವ ಒಬ್ಬ ಮುಸಲ್ಮಾನನ ಬಗ್ಗೆ ಅವನಿಗೆ ಇಷ್ಟವಿಲ್ಲದ್ದನ್ನು ಹೇಳುವುದು. ಅದು ಅವನ ದೇಹದ ಆಕೃತಿ ಅಥವಾ ಗುಣಕ್ಕೆ ಸಂಬಂಧಿಸಿದ್ದಾದರೂ ಸಹ. ಉದಾಹರಣೆಗೆ, ಒಕ್ಕಣ್ಣ, ಮೋಸಗಾರ, ಸುಳ್ಳುಗಾರ ಮುಂತಾದ ಅವನ ಕೆಟ್ಟ ಗುಣಗಳನ್ನು ಹೇಳುವುದು. ಈ ಗುಣಗಳು ಅವನಲ್ಲಿದ್ದರೂ ಸಹ. ಇನ್ನು, ಆ ಗುಣಗಳು ಅವನಲ್ಲಿಲ್ಲದಿದ್ದರೆ ಅದು ಸುಳ್ಳಾರೋಪವಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯಲ್ಲಿ ಇಲ್ಲದ್ದನ್ನು ಇದೆಯೆಂದು ಆರೋಪಿಸುವುದು. ಇದು ಪರದೂಷಣೆಗಿಂತಲೂ ಗಂಭೀರವಾಗಿದೆ.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯನ್ನು ಈ ಹದೀಸ್ ವಿವರಿಸುತ್ತದೆ. ಅವರು ವಿಷಯಗಳನ್ನು ಮನದಟ್ಟು ಮಾಡಿಸಲು ಪ್ರಶ್ನೆಗಳನ್ನು ಕೇಳುತ್ತಿದ್ದರು.
  2. ಸಂಗಡಿಗರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರುತ್ತಿದ್ದ ಉತ್ತಮ ಗುಣವನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಅವರು ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ, "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು" ಎಂದು ಹೇಳುತ್ತಿದ್ದರು.
  3. ತನಗೆ ತಿಳಿದಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಕೇಳಲಾದರೆ, "ಅಲ್ಲಾಹು ಹೆಚ್ಚು ತಿಳಿದವನು" ಎಂದು ಹೇಳಬೇಕೆಂದು ಈ ಹದೀಸ್ ತಿಳಿಸುತ್ತದೆ.
  4. ಸಮಾಜದ ಜನರ ಹಕ್ಕುಗಳನ್ನು ಮತ್ತು ಸಹೋದರತೆಯನ್ನು ಸಂರಕ್ಷಿಸುವ ಮೂಲಕ ಇಸ್ಲಾಂ ಧರ್ಮವು ಸಮಾಜವನ್ನು ರಕ್ಷಿಸುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
  5. ಜನರ ಹಿತದೃಷ್ಟಿಯಿಂದ ಕೆಲವು ಪರದೂಷಣೆಗಳನ್ನು ನಿಷೇಧದಿಂದ ಹೊರತುಪಡಿಸಲಾಗಿದೆ: ಉದಾಹರಣೆಗೆ, ಅನ್ಯಾಯವನ್ನು ತಡೆಗಟ್ಟುವುದಕ್ಕಾಗಿ. ಅಂದರೆ ಒಬ್ಬ ವ್ಯಕ್ತಿ ತನಗಾದ ಅನ್ಯಾಯವನ್ನು ಅದನ್ನು ಸರಿಪಡಿಸುವ ಅಧಿಕಾರವಿರುವ ವ್ಯಕ್ತಿಯೊಡನೆ ಹೇಳುವುದು. ಅಂದರೆ, ಇಂತಿಂತಹ ವ್ಯಕ್ತಿ ತನಗೆ ಅನ್ಯಾಯ ಮಾಡಿದ್ದಾನೆ ಅಥವಾ ತನ್ನೊಂದಿಗೆ ಇಂತಿಂತಹ ಕೃತ್ಯಗಳನ್ನು ಮಾಡಿದ್ದಾನೆಂದು ಹೇಳುವುದು. ಅದೇ ರೀತಿ, ಒಬ್ಬರನ್ನು ಮದುವೆಯಾಗಲು ಬಯಸುವವರು, ಅಥವಾ ವ್ಯಾಪಾರದಲ್ಲಿ ಪಾಲುದಾರನನ್ನಾಗಿ ಮಾಡಲು ಬಯಸುವವರು, ಅಥವಾ ಒಬ್ಬರ ಮನೆಯ ಬಳಿ ಮನೆ ಕಟ್ಟಲು ಅಥವಾ ಖರೀದಿಸಲು ಬಯಸುವವರು ಅವರ ಬಗ್ಗೆ ಅಭಿಪ್ರಾಯ ಕೇಳಿದಾಗ ಪ್ರಾಮಾಣಿಕವಾಗಿ ಅವರ ಕೆಟ್ಟ ಗುಣಗಳನ್ನು ಹೇಳುವುದು ಪರದೂಷಣೆಯಲ್ಲ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!